- March 7, 2022
ಮಧುಮತಿಯಾಗಿ ಸ್ಯಾಂಡಲ್ ವುಡ್ ಗೆ ಮರಳಿದ ಶ್ರೀಯಾ ಶರಣ್

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. 2013ರಲ್ಲಿ ರೂಪಾ ಅಯ್ಯರ್ ನಿರ್ದೇಶನದ “ಚಂದ್ರ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀಯಾ ಶರಣ್ ಪುನೀತ್ ರಾಜ್ ಕುಮಾರ್ ಅಭಿನಯದ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ತದ ನಂತರ ಮದುವೆ, ಮಗು ಎಂದು ಫ್ಯಾಮಿಲಿಯಲ್ಲಿ ಬ್ಯುಸಿಯಾಗಿದ್ದ ಶ್ರೀಯಾ ಮತ್ತೆ ನಟನೆಯತ್ತ ಮುಖ ಮಾಡಿದ್ದು ಇಂದು ಆಕೆಯ ಕೈಯಲ್ಲಿ ಹಲವು ಚಿತ್ರಗಳಿವೆ.

ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಲಿದ್ದಾರೆ ಶ್ರೀಯಾ. ಆರ್ ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ಸುದೀಪ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಅನ್ನು ಬಹಳ ಅದ್ಧೂರಿಯಾಗಿ ಮಾಡಿದ್ದಾರೆ.


ಇನ್ನು ಈಗಾಗಲೇ ಶೂಟಿಂಗ್ ನಲ್ಲಿಯೂ ಈಕೆ ಪಾಲ್ಗೊಂಡಿದ್ದಾರೆ. ಕಬ್ಜ ಚಿತ್ರದಲ್ಲಿ ಮಧುಮತಿ ಪಾತ್ರದಲ್ಲಿ ನಟಿಸುತ್ತಿರುವ ಶ್ರೀಯಾ ಮಹಾರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಕೂಡಾ ರಿಲೀಸ್ ಆಗಿದ್ದು ಸಿನಿಪ್ರಿಯರು ಹೊಸ ಅವತಾರ ಕಂಡು ಫಿದಾ ಆಗಿದ್ದಾರೆ.


ಉತ್ತರ ಪ್ರದೇಶದ ಶ್ರೀಯಾ ಸಿನಿ ಕೆರಿಯರ್ ಆರಂಭಿಸಿದ್ದು ತೆಲುಗಿನ ಇಷ್ಟಂ ಮೂಲಕ. ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ಶ್ರೀಯಾ ಸೌತ್ ಸಿನಿ ದುನಿಯಾದಲ್ಲಿ ಮೋಡಿ ಮಾಡಿದರು.

